ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿಯ ವಾಹಿನಿ: ಒಡಿಯೂರುಶ್ರೀ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಸೆಪ್ಟೆ೦ಬರ್ 16 , 2015
|
ಭಾರತೀಯ ಸಂಸ್ಕೃತಿಯ ವಾಹಿನಿಯಾಗಿರುವ ಯಕ್ಷಗಾನ ಸುಸಂಸ್ಕೃತ ಬದುಕಿಗೆ ದಾರಿ. ಸಂಗೀತ, ಸಾಹಿತ್ಯ ಸಂಸ್ಕೃತಿಯ ಸಮ್ಮಿಳಿತವಾಗಿರುವ ಯಕ್ಷಗಾನಕ್ಕೆ ಸರಕಾರದ ಸಹಕಾರವೂ ಹೆಚ್ಚಬೇಕು. ಸಾಧಕರನ್ನು ಮಾತ್ರವಲ್ಲದೆ ಅಶಕ್ತರಿಗೆ ನೆರವಾಗುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಧ್ಯೇಯ ಅತ್ಯಂತ ಸ್ತುತ್ಯರ್ಹ ಎಂದು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಸೋಮವಾರ ಕರಾವಳಿಯ ಪ್ರಸಿದ್ಧ ಕಲೆಗಳಲ್ಲಿ ಒಂದಾದ ಯಕ್ಷಗಾನವನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ, ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶದೊಂದಿಗೆಕಟೀಲು ಮೆಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತತ್ವ ದಲ್ಲಿ ಆರಂಭಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ,ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತಪದ್ಮನಾಭ ಅಸ್ರಣ್ಣ ಅವರು ಶುಭಾಶಂಸನೆಗೈದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು 'ಯಕ್ಷಧ್ರುವ ಪಟ್ಲ ಡಾಟ್ ಕಾಂ ವೆಬ್ಸೈಟ್' ಅನಾವರಣಗೊಳಿಸಿ ಮಾತನಾಡಿ, ಅಶಕ್ತ ಕಲಾವಿದರ ಬದುಕಿಗೆ ನೆರವಾಗುವ ಟ್ರಸ್ಟ್ನ ಉದ್ದೇಶಕ್ಕೆ ಸಹೃದಯರೆಲ್ಲರೂ ಸಹಕರಿಸಬೇಕು ಎಂದರು. ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು ಅವರು ಪಟ್ಲ ಫೌಂಡೇಶನ್ ಲಾಂಛನವನ್ನು ಅನಾವರಣಗೊಳಿಸಿದರು.
ಬಂಟರ ಮಾತ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಡಿ, ಶ್ರೀ ದೇವೀ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ , ಹಿರಿಯ ಯಕ್ಷಗಾನ ವಿದ್ವಾಂಸ ಶಿಮಂತೂರು ನಾರಾಯಣ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿಗಳಾದ ಎಸ್.ಕೆ ಪೂಜರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಪಾಪ್ಯುಲರ್ ಜಗದೀಶ್ ಸಿ.ಶೆಟ್ಟಿ, ರಾಘವೇಂದ್ರ ಅಚಾರ್ ಬಜಪೆ, ಜಿ.ಪಂ ಸದಸ್ಯ ಈಶ್ವರ ಕಟೀಲು, ಕೊಂಡೆಮೂಲ ಗ್ರಾ.ಪಂ ಅಧ್ಯಕ್ಷೆ ಗೀತಾ ಪೂಜಾರ್ತಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ನ ಮಾರ್ಗದರ್ಶಕ ಪಟ್ಲಗುತ್ತು. ಮಹಾಬಲ ಶೆಟ್ಟಿ, ಗೌರವಾಧ್ಯಕ್ಷ ಹಾಗೂ ಕಟೀಲು ಮೆಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಸುದೀರ್ ಭಟ್ ಎಕ್ಕಾರು, ಐಕಳ ಗಣೇಶ್ ಶೆಟ್ಟಿ, ಅಶೋಕ್ ಶೆೆಟ್ಟಿ ಪೆರ್ಮುದೆ, ಕಾರ್ಯದರ್ಶಿ ಅಡ್ಯಾರು ಪುರುಷೋತ್ತಮ ಕೆ. ಭಂಡಾರಿ, ಜತೆ ಕಾರ್ಯದರ್ಶಿಗಳಾದ ಉದಯಾನಂದ ಶೆಟ್ಟಿ ಕುಂದಾಪುರ, ರಾಜೀವ್ ಕೆ. ಕೈಕಂಬ, ಸಂಘಟಣಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಕೋಶಾಧಿಕಾರಿ ಸಿಎ ಸುದೇಶ್ ಕುಮರ್ ರೈ, ಯೋಜನಾ ನಿರ್ದೇಶಕರಾದ ಮಂಗಳೂರು ಕ್ಷೇಮ ಡೀನ್ ಡಾ.ಸತೀಶ್ ಭಂಡಾರಿ ಮಂಗಳೂರು ಕೆ.ಎಂ.ಸಿಯ ಹದಯತಜ್ಞ ಡಾ. ಪದ್ಮನಾಭ ಕಾಮತ್ , ಪಟ್ಲ ಸತೀಶ್ಕುಮಾರರ್ ಧರ್ಮಪತ್ನಿ ದೇವಿಕಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಟ್ರಸ್ಟ್ನ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಸಹಾಯಧನ ವಿತರಣೆ:
ಇದೇ ಸಂದರ್ಭ ತೆಂಕು-ಬಡಗು ತಿಟ್ಟಿನ ಹನ್ನೊಂದು ಮಂದಿ ಅಶಕ್ತ ಕಲಾವಿದರಿಗೆ ತಲಾ 50 ಸಾವಿರ ರೂ.ನ ಚೆಕ್, ಚಿನ್ನದ ಪದಕ, ಸ್ಮರಣಿಕೆ, ಶಾಲು ಸಹಿತ ನೆರವು ಹಸ್ತಾಂತರಿಸಲಾಯಿತು. ಜಗನ್ನಾಥ ಆಚಾರಿ, ಉದಯ ಕುಮಾರ್, ತುಂಬ್ರಿ ಬಾಸ್ಕರ, ಉದಯ ನಾವಡ, ಪರಮೇಶ್ವರ ಹೆಗಡೆ, ಗಣೇಶ್ ಕೊಲಕ್ಕಾಡಿ, ಕೊರಗಪ್ಪ ನಾಯ್ಕ, ಜನಾರ್ದನ ಜೋಗಿ, ಹುಣ್ಸೂರು ಜಯರಾಮ ಶೆಟ್ಟಿ, ದಾಸನಡ್ಕ ರಾಮ ಕುಲಾಲ್ ಹಾಗೂ ಇತ್ತೀಚೆಗೆ ನಿಧನರಾದ ಕಟೀಲು ಮೇಳದ ಕಲಾವಿದ ಬೆಳಾಲು ರಮೇಶ್ ಗೌಡ(ಮರಣೋತ್ತರ) ಅವರಿಗೆ ವಿತರಿಸಲಾಯಿತು.
ಅದಷ್ಟಶಾಲಿ ಕಲಾವಿದರು:
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರ ಹೆಸರಿನ ಚೀಟಿ ಎತ್ತುವ ಮೂಲಕ ಇಬ್ಬರು ಅದೃಷ್ಟಶಾಲಿ ಕಲಾವಿದರನ್ನು ಗುರುತಿಸಲಾಗಿದ್ದು, ರವಿಶಂಕರ್ ಕಾವೂರು, ಕಲ್ಲಗುಂಡಿ ವೆಂಕಟೇಶ ಆಚಾರ್ಯ ಅವರಿಗೆ ತಲಾ 25 ಸಾವಿರ ರೂ. ಗೌರವ ಧನ ನೀಡಿ ಗೌರವಿಸಲಾಯಿತು.
ಟ್ರಸ್ಟ್ನ ಪ್ರಮುಖ ನಡೆ:
- ಶಾಶ್ವತ ನಿಧಿ ಸ್ಥಾಪಿಸಿ ವರ್ಷಂಪ್ರತಿ ತಿಟ್ಟು ಹಾಗೂ ಜಾತಿ ಭೇದವಿಲ್ಲದೆ ಹತ್ತು ಮಂದಿ ಅಶಕ್ತ ಕಲಾವಿದರಿಗೆ ದೊಡ್ಡ ಮೊತ್ತದ ಸಹಾಯಧನ ನೀಡುವುದು ಟ್ರಸ್ಟ್ನ ಪ್ರಮುಖ ಧ್ಯೇಯ.
- ಅನಾರೋಗ್ಯ-ಅಪಘಾತ-ಸಹಜ ಸಾವಿಗೀಡಾದ ಅಶಕ್ತ ಕಲಾವಿದರ ಕುಟುಂಬಕ್ಕೆ ನೆರವು. *ಅಶಕ್ತ ಕಲಾವಿದರ ಕುಟುಂಬದವರಿಗೆ ಶೈಕ್ಷಣಿಕ ನೆರವು, ಆರೋಗ್ಯಕ್ಕೆ ನರವು.
ಟ್ರಸ್ಟ್ನ ಅಧ್ಯಕ್ಷ ಪಟ್ಲ ಸತಿಶ್ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಶಕ್ತ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ 10 ಕೋಟಿ ರೂ.ಗಳ ನಿಧಿ ಸ್ಥಾಪಿಸುವ ಉದ್ದೇಶವಿದೆ. ಇದು ಸಾಕಾರಗೊಂಡಲ್ಲಿ 50 ವಯೋಮಿತಿ ದಾಟಿದ ಹಿರಿಯ ಕಲಾವಿದರಿಗೆ ನಿವೃತ್ತಿ ವೇತನವಾಗಿ ಮಾಸಿಕ 5 ಸಾವಿರ ರೂ. ನೀಡುವ ಯೋಚನೆ ಟ್ರಸ್ಟ್ಗೆ ಇದೆ ಎಂದರು.
ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ವಾಸುದೇವ ರಂಗ ಭಟ್ ನೆರವು ಪಡೆದ ಕಲಾವಿದರ ವಿವರ ನೀಡಿದರು. ವಿದ್ಯಾ ಕೋಳ್ಯೂರು ಪಟ್ಲ ನಡೆದು ಬಂದ ದಾರಿಯನ್ನು ಪ್ರಸ್ತುತಪಡಿಸಿದರು. ಜನಾರ್ದನ ಅಮ್ಮುಂಜೆ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಹಾಗೂ ಅಡ್ಯಾರು ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಂದ್ರಾವಳೀ ವಿಲಾಸ, ಶೀವಾರ್ಚನೆ ಯಕ್ಷಗಾನ ಬಯಲಾಟ ಪ್ರದರ್ಶನ ಗಮನ ಸೆಳೆಯಿತು.
*********************
ಕೃಪೆ :
vijaykarnataka
|
|
|